ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

ಶಕ್ತಿನಗರದ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದ ಉದ್ಘಾಟನಾ ಸಮಾರಂಭವು ನಡೆಯಿತು.

ಕಾರ್ಯಕ್ರಮವನ್ನು ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ ಇವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಭಾರತೀಯರು ದೇಶಭಕ್ತಿಯನ್ನು ಬೇಳಸಿಕೊಳ್ಳಬೇಕು. ನಾವು ದೇವಸ್ಥಾನದ ಜೊತೆಗೆ ಶಾಲೆಯನ್ನು ಪ್ರಾರಂಭಿಸಬೇಕು. ಈ ವಿದ್ಯಾಸಂಸ್ಥೆಗಳಲ್ಲಿ ಮೌಲ್ಯಯುತ ಶಿಕ್ಷಣವನ್ನು ನೀಡಬೇಕು. ಈ ಮೂಲಕ ಮಕ್ಕಳು ದೇವರಲ್ಲಿ ಭಕ್ತಿ ಮತ್ತು ಧರ್ಮಶ್ರದ್ಧೆಯನ್ನು ಮೂಡಿಸಿಕೊಳ್ಳಬೇಕು ಎಂದು ಹೇಳಿದರು.

ಹಾಗೆಯೇ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಮ್. ಬಿ. ಪುರಾಣಿಕ್ ಅವರು ಇಂದಿನ ದಿನಗಳಲ್ಲಿ ಭಯೋತ್ಪಾದಕರು ಧರ್ಮ ಯಾವುದು ಎಂದು ಕೇಳಿ ಜನರನ್ನು ಸಾಯಿಸುತ್ತಾರೆ. ಆದ್ದರಿಂದ ನಾವು ನಮ್ಮ ಧರ್ಮದ ಬಗ್ಗೆ ಕಾಳಜಿ ವಹಿಸಬೇಕು. ದಿನನಿತ್ಯ ನಾವು ನಮ್ಮ ಮಕ್ಕಳನ್ನು ದೇವಸ್ಥಾನಕ್ಕೆ ಹೋಗುವಂತೆ ನೋಡಿಕೊಳ್ಳಬೇಕು. ದೇವಸ್ಥಾನಗಳಲ್ಲಿ ಮತ್ತು ವಿದ್ಯಾಸಂಸ್ಥೆಗಳಲ್ಲಿ ಮೌಲ್ಯಯುತ ಶಿಕ್ಷಣದ ಕುರಿತಂತೆ ಅರಿವು ಮೂಡಿಸಬೇಕು. ಮನೆಯ ಹಿರಿಯರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಕೆ. ಸಿ. ನಾಯಕ್ ಅವರು ಪ್ರತಿನಿತ್ಯವೂ ಕೂಡ ಶ್ರೀ ವಿಷ್ಣು ಸಹಸ್ರನಾಮದ ಪಾರಾಯಣವನ್ನು ನಾವೆಲ್ಲ ಮಾಡಬೇಕು. ತನ್ಮೂಲಕ ಸಮಾಜಕ್ಕೆ ದೇಶಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೂರಾರು 108 ಜನರು ಭಗವದ್ಗೀತೆಯನ್ನು ಮತ್ತು ಶ್ರೀ ವಿಷ್ಣು ಸಹಸ್ರನಾಮವನ್ನು ಏಕಕಂಠದಲ್ಲಿ ಶ್ರದ್ಧಾ ಭಕ್ತಿಯಿಂದ ಪಾರಾಯಣವನ್ನು ಮಾಡಿದರು. ವೇದಿಕೆಯಲ್ಲಿ ದೇವಸ್ಥಾನದ ಟ್ರಸ್ಟಿ ಸಗುಣ ಸಿ. ನಾಯಕ್, ಸಂಜೀತ್ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮ ಶಕ್ತಿ ಪಪೂ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ನವೀನ್ ಹೆಗ್ಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ ಆಲ್ ಕಾರ್ಗೋದ ಮಾಲಕರಾದ ಡಾ. ಶಶಿಕಿರಣ ಶೆಟ್ಟಿ, ನಿಧಿ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕರಾದ ಪ್ರಶಾಂತ್ ಸುನೀಲ್, ಫಾರ್ಮಸಿಕಲ್ ವಿತರಕರಾದ ಗಿರೀಶ್ ಅವರನ್ನು ಸನ್ಮಾನಿಸಲಾಯಿತು.